ದೊಡ್ಡ ವೀರ ರಾಜೇಂದ್ರ ೧೭೮೦ ರಿಂದ ೧೮೦೯ ರವರೆಗೆ ಕೊಡಗು ಸಾಮ್ರಾಜ್ಯದ ಆಡಳಿತಗಾರನಾಗಿದ್ದರು. ಮೈಸೂರಿನ ರಾಜ ಟಿಪ್ಪು ಸುಲ್ತಾನನ ಆಕ್ರಮಣದಿಂದ ರಾಜ್ಯವನ್ನು ಮುಕ್ತಗೊಳಿಸಿದಕ್ಕಾಗಿ ಅವರು ಕೊಡಗು ಇತಿಹಾಸದ ನಾಯಕ ಎಂದು ಪರಿಗಣಿಸಲ್ಪಟ್ಟಿದ್ದಾರೆ. ನಂತರ ಅವರು ಟಿಪ್ಪು ಸುಲ್ತಾನ್ ವಿರುದ್ಧದ ಹೋರಾಟದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದರು. == ಆರಂಭಿಕ ಜೀವನ ಮತ್ತು ಗಡಿಪಾರು == ದೊಡ್ಡ ವೀರ ರಾಜೇಂದ್ರ ಅವರ ಬಾಲ್ಯದ ಬಗ್ಗೆ ಹೆಚ್ಚು ತಿಳಿದಿಲ್ಲ. ೧೭೮೦ ರಲ್ಲಿ, ಕೊಡಗು ಸಾಮ್ರಾಜ್ಯದ ಆಡಳಿತಗಾರದ ಇವರ ತಂದೆ ಲಿಂಗ ರಾಜರವರು ದೊಡ್ಡ ವೀರ ರಾಜೇಂದ್ರ ಇನ್ನೂ ಚಿಕ್ಕವನಾಗಿದ್ದಾಗ ನಿಧನರಾದರು. ಮೈಸೂರಿನ ರಾಜ ಹೈದರಾಲಿ ಇದನ್ನು ಒಂದು ಅವಕಾಶವಾಗಿ ನೋಡಿದರು ಮತ್ತು "ರಾಜಕುಮಾರರು (ದೊಡ್ಡ ವೀರ ರಾಜೇಂದ್ರ ಮತ್ತು ಅವನ ಸಹೋದರ) ವಯಸ್ಸಿಗೆ ಬರುತ್ತಾರೆ" ಎಂದು ತಿಳಿದು ಕೊಡಗು ಸಾಮ್ರಾಜ್ಯವನ್ನು ಸ್ವಾಧೀನಪಡಿಸಿಕೊಂಡರು. ಸೆಪ್ಟೆಂಬರ್ ೧೭೮೨ ರಲ್ಲಿ, ರಾಜಕುಮಾರರನ್ನು ಗರೂರಿಗೆ ಗಡೀಪಾರು ಮಾಡಲಾಯಿತು. ತಮ್ಮ ರಾಜಕುಮಾರರ ಗಡೀಪಾರು ಮಾಡುವಿಕೆಯಿಂದ ಕೋಪಗೊಂಡ ಕೊಡಗಿನ ಜನರು ದಂಗೆ ಎದ್ದರು ಮತ್ತು ಸ್ವಾತಂತ್ರ್ಯವನ್ನು ಘೋಷಿಸಿದರು. ಶೀಘ್ರದಲ್ಲೇ ಡಿಸೆಂಬರ್ ೧೭೮೨ ರಲ್ಲಿ, ಹೈದರಾಲಿ ಕ್ಯಾನ್ಸರ್ ಬೆಳವಣಿಗೆಯಿಂದಾಗಿ ಮರಣಹೊಂದಿದ ನಂತರ ಅವರ ಮಗ ಟಿಪ್ಪು ರಾಜನಾದನು. ಟಿಪ್ಪು ಕೊಡಗು ರಾಜಮನೆತನವನ್ನು ಪಿರಿಯಾಪಟ್ಟಣಕ್ಕೆ ಕಳುಹಿಸಿದನು ಹಾಗು ಕೊಡಗು ಮತ್ತು ಇತರ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾದನು. ಡಿಸೆಂಬರ್ ೧೭೮೮ ರಲ್ಲಿ, ದೊಡ್ಡ ವೀರ ರಾಜೇಂದ್ರ ಪಿರಿಯಾಪಟ್ಟಣದಿಂದ ತಪ್ಪಿಸಿಕೊಂಡರು ಮತ್ತು ೧೭೯೦ ರ ಹೊತ್ತಿಗೆ ಕೊಡಗಲ್ಲಿ ಅಧಿಕಾರವನ್ನು ಮರಳಿ ಪಡೆದರು. == ಮೈಸೂರು ಸಾಮ್ರಾಜ್ಯದ ವಿರುದ್ಧ ಯುದ್ಧಗಳು == ದೊಡ್ಡ ವೀರ ರಾಜೇಂದ್ರನು ಮೈಸೂರಿನ ಆಕ್ರಮಿತ ಸೈನ್ಯವನ್ನು ಬಿಸಿಲೆ ಘಾಟ್‌ನಿಂದ ಮಾನಂತೋಡಿಯವರೆಗೆ ಹೊರಹಾಕಿದನು ಮತ್ತು ಮೈಸೂರು ಸಾಮ್ರಾಜ್ಯದ ಪ್ರದೇಶಗಳಿಗೆ ಲೂಟಿ ಮಾಡುವ ದಂಡಯಾತ್ರೆಯನ್ನು ನಡೆಸಿದನು. ಪ್ರತೀಕಾರವಾಗಿ, ಟಿಪ್ಪು ಸುಲ್ತಾನನು ಅವರ ವಿರುದ್ಧ ಸೈನ್ಯವನ್ನು ಕಳುಹಿಸಿದರು. ಟಿಪ್ಪು ಸುಲ್ತಾನನ ಜನರಲ್ಗಳಾದ ಗೋಲಂ ಅಲಿ ಮತ್ತು ಬುರಾನ್-ಉದ್-ದಿನ್ ನೇತೃತ್ವದಲ್ಲಿ, ಆದರೆ ದೊಡ್ಡ ವೀರ ರಾಜೇಂದ್ರ ಅವರನ್ನು ಸೋಲಿಸಿದರು. ಜೂನ್ ೧೭೮೯ ರಲ್ಲಿ, ಅವರು ಕುಶಾಲನಗರದ ಕೋಟೆಯನ್ನು ಲೂಟಿ ಮಾಡಿ ಸುಟ್ಟುಹಾಕಿದರು ಹಾಗು ಆಗಸ್ಟ್ನಲ್ಲಿ ಅವರು ಬೆಪ್ಪುನಾಡಿನ ಕೋಟೆಯನ್ನು ನಾಶಪಡಿಸಿದರು. ಇದರ ನಂತರ ಭಾಗಮಂಡಲದ ಕೋಟೆಯನ್ನು ವಶಪಡಿಸಿಕೊಳ್ಳಲಾಯಿತು. ನಂತರ ಅಮರ ಸುಳ್ಯವನ್ನು ವಶಪಡಿಸಿಕೊಂಡರು. ದೊಡ್ಡ ವೀರ ರಾಜೇಂದ್ರರ ಯಶಸ್ಸನ್ನು ಗಮನಿಸಿದ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯ ಸರ್ಕಾರವು ಅಕ್ಟೋಬರ್ ೧೭೯೦ ರಲ್ಲಿ ಟಿಪ್ಪು ಸುಲ್ತಾನ್ ವಿರುದ್ಧ ಮೈತ್ರಿ ಮಾಡಿಕೊಳ್ಳಲು ಅವಕಾಶ ನೀಡಿತು. ಮೈಸೂರು ಸಾಮ್ರಾಜ್ಯದಲ್ಲಿ ಪ್ರಬಲ ಎದುರಾಳಿಯನ್ನು ಎದುರಿಸಿದ ದೊಡ್ಡ ವೀರ ರಾಜೇಂದ್ರ ಈ ಪ್ರಸ್ತಾಪವನ್ನು ಒಪ್ಪಿಕೊಂಡರು ಹಾಗು ಬ್ರಿಟಿಷರೊಂದಿಗೆ ಮೈತ್ರಿ ಮಾಡಿಕೊಂಡರು. ಗಾಬರಿಗೊಂಡ ಟಿಪ್ಪು ಜನರಲ್ ಖಾದರ್ ಖಾನ್ ನೇತೃತ್ವದ ಮತ್ತೊಂದು ಸೈನ್ಯವನ್ನು ಕಳುಹಿಸಿದನು ಹಾಗು ಅದು ಸಹ ಸೋಲಿಸಲ್ಪಟ್ಟಿತು. ಅದರ ನಂತರ, ಮಡಿಕೇರಿ ಕೋಟೆಯು ಯುದ್ಧವಿಲ್ಲದೆ ದೊಡ್ಡ ವೀರ ರಾಜೇಂದ್ರರಿಗೆ ಶರಣಾಯಿತು. ದೊಡ್ಡ ವೀರ ರಾಜೇಂದ್ರ ಅವರು ಟಿಪ್ಪು ಸುಲ್ತಾನನ ರಾಜಧಾನಿಯಾದ ಶ್ರೀರಂಗಪಟ್ಟಣಕ್ಕೆ ಹೋಗುವ ಮಾರ್ಗದಲ್ಲಿ, ಕೊಡಗು ಮೂಲಕ ಹಾದುಹೋಗಲು ಬ್ರಿಟಿಷ್ ಬಾಂಬೆ ಸೈನ್ಯವನ್ನು ಅನುಮತಿಸಿದರು. ೧೭೯೯ ಮೇ ರಂದು ಟಿಪ್ಪು ಸುಲ್ತಾನ್ ಸಾಯುವವರೆಗೂ ಅವರು ಟಿಪ್ಪು ಸುಲ್ತಾನ್ ವಿರುದ್ಧದ ಹೋರಾಟದಲ್ಲಿ ಬ್ರಿಟಿಷರಿಗೆ ಸಹಾಯ ಮಾಡಿದರು. == ಸಾವು == ದೊಡ್ಡ ವೀರ ರಾಜೇಂದ್ರ ೧೮೦೯ ರಲ್ಲಿ ನಿಧನರಾದರು. ಅವರ ಸಮಾಧಿ ಮರ್ಕಾರದಲ್ಲಿ (ಮಡಿಕೇರಿ) ಇದೆ. ಅವರನ್ನು ದೈವೀಕರಿಸಲಾಗಿದೆ ಹಾಗು ಅವರ ಸಮಾಧಿಯನ್ನು ಇಂದಿಗೂ ಪೂಜಿಸಲಾಗುತ್ತದೆ. == ಕೆಲಸ == ದೊಡ್ಡ ವೀರ ರಾಜೇಂದ್ರ ಅವರು ೧೬೩೩ ರಿಂದ ೧೮೦೭ ರವರೆಗಿನ ಕೊಡಗು ಅರಸರ ಇತಿಹಾಸವನ್ನು ದಾಖಲಿಸುವ ರಾಜೇಂದ್ರನಾಮ ಸಾಹಿತ್ಯ ಕೃತಿಯನ್ನು ಸಂಕಲಿಸಿದ್ದಾರೆ. ಅವರು ೧೭೯೨ ವಿರಾಜಪೇಟೆ ಪಟ್ಟಣವನ್ನು ಸ್ಥಾಪಿಸಿದರು. == ಉಲ್ಲೇಖಗಳು ==